ಮೂಡಬಿದಿರೆ: ಅಯ್ಯಪ್ಪ ವ್ರತಧಾರಿಗಳೀರ್ವರು ನದಿಯಲ್ಲಿ ಸ್ನಾನ ಮಾಡಲೆಂದು ಹೋಗಿ ಅಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಮಾಂಟ್ರಾಡಿಯಲ್ಲಿ ರವಿವಾರ ಅಪರಾಹ್ನ 2 ಗಂಟೆ ಸುಮಾರಿಗೆ ನಡೆದಿದೆ .
ದರೆಗುಡ್ಡೆ ಐದು ಸೆಂಟ್ಸ್ ಕಾಲನಿ ನಿವಾಸಿ ಗುಲಾಬಿ ಮೂಲ್ಯ ಎಂಬವರ ಪುತ್ರ ಸದಾನಂದ (31) ಹಾಗೂ ಮಾಂಟ್ರಾಡಿ ಗ್ರಾಮದ ಲೋಕೇಶ್ (35) ಮೃತಪಟ್ಟ ಅಯ್ಯಪ್ಪ ವ್ರತಧಾರಿಗಳು. ಇವರೊಂದಿಗೆ ಸ್ನಾನ ಮಾಡಲು ತೆರಳಿದ್ದ ಸುರೇಶ್ ಎಂಬ ವ್ರತಧಾರಿ ಅಪಾಯದಿಂದ ಪಾರಾಗಿದ್ದಾರೆ.
ಮೂರು ಮಂದಿ ಸ್ನೇಹಿತರು ರವಿವಾರ ಮಧ್ಯಾಹ್ನ ಊಟ ಮುಗಿಸಿ ಮಾಂಟ್ರಾಡಿ ಫಲ್ಗುಣಿ ನದಿಗೆ ಸ್ನಾನಕ್ಕೆಂದು ತೆರಳಿದ್ದರು. ಬಟ್ಟೆಗಳನ್ನೆಲ್ಲಾ ಒಗೆದು ಹಾಕಿದ್ದು, ಸುರೇಶ್ ಬಟ್ಟೆಗಳನ್ನು ಒಣಗಿಸಲು ನದಿ ದಂಡೆಗೆ ಬಂದಿದ್ದರು. ಸದಾನಂದ ಮತ್ತೆ ಲೋಕೇಶ್ ನೀರಿಗೆ ಇಳಿದು ಸ್ನಾನ ಮಾಡಲು ಆರಂಭಿಸಿದ್ದರು. ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಮುಳುಗಿದ್ದಾರೆ.
ಬಟ್ಟೆ ಒಣಗಿಸಲು ತೆರಳಿದ್ದ ಸುರೇಶ್ ಸ್ವಲ್ಪ ಸಮಯದ ಬಳಿಕ ಹಿಂತಿರುಗಿ ಬಂದಾಗ ನದಿಯ ಬಳಿ ಇಬ್ಬರೂ ಇಲ್ಲದ್ದನ್ನು ಗಮನಿಸಿ ಆತಂಕಗೊಂಡು ಬೊಬ್ಬೆ ಹಾಕಿದಾಗ ಅಕ್ಕಪಕ್ಕದ ಜನರು ಜಮಾಯಿಸಿದರು. ಬಳಿಕ ನದಿಯಲ್ಲಿ ಹುಡುಕಾಡಿದಾಗ ಸ್ವಲ್ಪ ದೂರದಲ್ಲಿ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದು ಬೆಳಕಿಗೆ ಬಂತು.
ಮೂಡಬಿದಿರೆಯ ಅಗ್ನಿ ಶಾಮಕ ದಳದವರು ಮೃತ ದೇಹಗಳನ್ನು ನೀರಿನಿಂದ ಮೇಲೆ ತೆಗೆದಿದ್ದು, ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಫಲ್ಗುಣಿ ನದಿಯಲ್ಲಿ ಸುಮಾರು 15 ಅಡಿಯಷ್ಟು ಆಳದಲ್ಲಿ ನೀರು ಹರಿಯುತ್ತಿದೆ. ನದಿಯ ಬದಿಯ ಅಲ್ಲಲ್ಲಿ ಹೊಂಡಗಳಿವೆ. ಇದರ ಅರಿವಿರದ ಅಯ್ಯಪ್ಪ ವೃತಧಾರಿಗಳು ನೀರಿಗೆ ಇಳಿದು ಸ್ನಾನ ಮಾಡುವಾಗ ಈ ಗುಂಡಿಯ ಕೆಸರಿನಲ್ಲಿ ಕಾಲು ಹೂತು ಹೋಗಿ ಮುಳುಗಿರಬಹುದೆಂದು ಶಂಕಿಸಲಾಗಿದೆ. ಮೃತ ಸದಾನಂದ ಕೂಲಿ ಕಾರ್ಮಿಕರಾಗಿದ್ದು, ಅವಿವಾಹಿತರಾಗಿದ್ದಾರೆ. ಲೋಕೇಶ್ ಕೃಷಿಕರಾಗಿದ್ದು ವಿವಾಹಿತರು. ಪತ್ನಿ ಮತ್ತು ಒಂದು ಗಂಡು ಮಗುವಿದೆ.
ಮೂಡಬಿದಿರೆ ವೃತ್ತ ನಿರೀಕ್ಷಕ ಎ.ಕೆ. ತಿಮ್ಮಯ್ಯ, ಠಾಣಾಧಿಕಾರಿ ರಮೇಶ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ತನಿಖೆ ನಡೆಸುತ್ತಿದ್ದಾರೆ.
info@mangaloreantimes.com